ಚಿಟ್ಟೆ... ಇಷ್ಟೊಂದು ಸುಂದರ ತನುವ ಹೊಂದಿ,ಬಣ್ಣ ಬಣ್ಣದ ಲಲಿತಾಂಗಿ ನೀನೇಕೆ ಅಲ್ಲಲ್ಲಿ ಅಲೆಯುವೆ ?. ಆ ನೀಳ ಸೂಕ್ಷ್ಮ ಆಘ್ರಾಣ ಹೊತ್ತು ಅಲೆದು, ಮಧುವ ಹೀರುವ ನೆವದಿ, ಯಾರದೋ ಜೀವೋತ್ಪಾದನೆಗೆ ಬದುಕ ಸವೆಸುತಲಿರುವೆ. ಜೀವನವೇ ಹೊಯ್ದಾಟ, ಅಲ್ಲಿಲ್ಲಿ ಅಲೆದಾಟ, ಲಾಭ ಪಡೆವವನ್ಯಾರೊ ಅಪರಿಚಿತ. ಆದರೂ ಲೋಕದ ಕಣ್ಣಿಗೆ "ಪಾತರಗಿತ್ತಿ". ಜೀವನವೇ ಹೀಗೆ , ಕಾಣುವ ಪರದೆಯ ಬಣ್ಣದ ಬದುಕಿಗೂ ಪ್ರಪಂಚ ಗುರುತಿಸದ ಮತ್ತೊಂದು ಆಯಾಮವಿದೆ. ಈ ಪತಂಗ/ ಚಿಟ್ಟೆ/ ಪಾತರಗಿತ್ತಿ... ಯಾರಾದರೇನು...ತನ್ನ ಹೀರುವಿಕೆಯಲ್ಲಿ ಎಷ್ಟೊಂದು ಸೂಕ್ಷ್ಮತೆ...
ಸತ್ಯ ಮುಚ್ಚಿಟ್ಟಸ್ಟೂ ಮಂಕಾಗುತ್ತದೆ. ಮಿಥ್ಯೆ ಹೊರಗಡೆದಷ್ಟೂ ಶುದ್ಧವಾಗುತ್ತದೆ. ಸತ್ಯ ಒಪ್ಪದ ಮನಸ್ಸು, ಕ್ಷೋಭೆಯಿಂದ ಬಡಬಡಿಸುತ್ತವೆ,ಅರೆ ಬೆಂದ ಅನ್ನ ತಿಂದು, ಗಂಟಲಲ್ಲಿ ಸಿಕ್ಕಿ ಒದ್ದಾಡಿದಂತೆ. ಸತ್ಯ ಒಪ್ಪುವುದು ಅಷ್ಟು ಸುಲಭವಲ್ಲ. ಸತ್ಯ ಅರಗಿಸಲು ಕಷ್ಟ, ಮಥಿಸಿ ಮನನ ಮಾಡಲು ಸಾವಧಾನ ಬೇಕು...ಮನಸ್ಸಿಗೆ ನೆಮ್ಮದಿ ಬೇಕು. ಸತ್ಯ ಸಾಯದು,...ಅರಗಿಸಲಾಗದ ಅತೃಪ್ತ ಆತ್ಮಗಳ ಬಡಬಡಿಕೆಗೆ ಸತ್ಯ ನಾಶವಾಗದು..ಸತ್ಯವನ್ನು ಸಂಶೋಧಿಸಿ, ಸದಾ ಅರಗಿಸಿಕೊಳ್ಳುವ ಪ್ರತಿಭೆ ಮತ್ತಷ್ಟು ಬೆಳೆಯುತ್ತದೆ......
ಪ್ರತಿಯೊಬ್ಬರೂ ಅವರದೇ ಆದ ಹೇಳಬಾರದ, ಹೇಳಲಾರದ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಆದ್ದರಿಂದ ಯಾರನ್ನೂ, ಅನಾವಶ್ಯಕವಾಗಿ ಒಮ್ಮಿಂದೊಮ್ಮೆಲೆ, ನಿಂದಿಸಲು, ಅವಮಾನ, ಅಪಮಾನಪಡಿಸಲು ಆಸ್ಪದಕೊಡಬಾರದು. ಅಪನಂಬಿಕೆ, ನೆಮ್ಮದಿ ಮತ್ತು ಸೂಕ್ಷ್ಮ ಸಂಬಂಧಗಳನ್ನು ಕೊಲ್ಲುತ್ತದೆ. ಪ್ರಬುದ್ಧತೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಮತ್ತು ಅನಿವಾರ್ಯ.
Comments
Post a Comment