ಮುಸ್ಸಂಜೆ ಮಾತು
"ಮುಸ್ಸಂಜೆ ಮಾತು"
ಕೆಂಪಡರಿ ಪಳಪಳಿಸಿ, ಹೊಸ ಆಸೆ ಬಿತ್ತಿ,
ಕತ್ತಲೆಯ ಕೂಪದಲಿ ಎನ್ನೆದೆಯ ತಳ್ಳಿ ,
ಒಂಟಿಯಾಗಿಸಿ ನೀ, ಕಸಿದೆನ್ನ ಮುದವ
ಒಬ್ಬನೇ ಏಕೆ ಮುಳುಗಿ ಮರೆಯಾದೆ ರವಿ ನೀ ದೂರದಲ್ಲಿ.
ಬಿಸಿ ಉಸುಕ ಮೈ ಹಾಸಿ, ಮೇಲೆ ಬೀಸಿದೆ ತಂಗಾಳಿ,ತಣಿಸುವುದೇ ಒಡಲ ಬೆಂಕಿ.
ನೀನೇನೋ ಜಾರಿದೆಯೋ, ಸರ್ವರನು ಮರೆತು.
ಬಿಟ್ಟು ತೊಲಗಿಹೆ ನೀ ಎನ್ನ ಒಂಟಿ ಮನವ.
ಅಲೆಯು ಉಕ್ಕಿ ಅಪ್ಪಳಿಸುತಿದೆ
ಭಾವನೆಗಳ ಏರಿ.
ಬಿಳಿ ನೊರೆಯ ಸಾಲಿನಲಿ ಸಾಗಿ ಬರುತಿದೆ ನೋಡು, ನೂರಾರು ಹೊಲಸು ಸೇರಿ.
ಶುಭ ಶುಭೃ ನೊರೆಯು ಸಾಕೆನೆಗೆ ,
ಹೊತ್ತೊಯ್ಯು ಹೊಲಸು ನಿನ್ನೊಡಲಿನೊಳಗೆ.
ಬಿಳಿ ನೊರೆಗೆ ಮುತ್ತಿಕ್ಕಿತಡಿಯ ಮರಳಿನ ರಾಶಿ, ಪಳಪಳನೆ ಮಿಂಚುತಿರಲಿ.
ಪೂರ್ಣ ಚಂದಿರನದಕೆ ಮಂದ ಬೆಳಕನು ಚೆಲ್ಲಿ, ಹೊಸ ಕನಸ ಮನಸೊಳಗೆ ಬಿತ್ತುತಿರಲಿ.
ಮನದ ಮೂಲೆಯ ತುಂಬಿ, ಒಂಟಿಯಾಗಿಸದೆ ಜಾಗ ತುಂಬುತಿರಲಿ..
Comments
Post a Comment